Monday, November 3, 2008

ಗೆಳಯಾ......ಗೆಳೆಯಾ........

ಆಫೀಸಿನಲ್ಲಿದ್ದೆ, ಹಾಗೇ ನನ್ನ ಕರೆಗಂಟೆ ಒಮ್ಮೆ ಗುಂಗಿಸಿತು. ಅತ್ತಲಿಂದ ಬಂದ ಅಶರೀರವಾಣಿ, ಬಿಡುವಾಗಿದೀಯ ಬೆಂಗಳೂರಿಗೆ ಬರ್ತೇನೆ ಅಂದ. ಹೌದು ಬಹುದಿನಗಳಿಂದ ಒಬ್ಬರನೊಬ್ಬರು ಭೇಟಿ ಮಾಡಲು ಆಗದ ನಾವಿಬ್ಬರು ಗೆಳೆಯರು ಅಂದು ಒಂದೇ ಸೂರಿನಡಿಯಲ್ಲಿ ಕೆಲಕಾಲ ಹರಟಿದೆವು. ಮೈಸೂರಲ್ಲಿ ನೆಲೆಸಿರೋ ಗೆಳೆಯ ಜೋಮನ್ ಅದ್ಯಾಕೋ ಬೆಸರಗೊಂಡು ಬೆಂಗಳೂರು ಬಸ್ ಏರಿದ್ದ. ಹಾಗೇ ಮೂರು ತಾಸುಗಳ ದಾರಿ ಸವೆಸಿ ಬಂದು ಮೆಜೆಸ್ಟಿಕ್ ಹೆಬ್ಬಾಗಿಲಿಗೆ ನಿಂತಿದ್ದ.
ಮುರುದಿನ ಕತ್ಚಲ ಪಾಳೆಗೆ ಬರೋ ನೆಮ್ಮದಿ ಇದ್ದಿದ್ರಿಂದ ಹಾಯಾಗಿ ಸಮಯ ಕಳೆದೆವು. ದೂರದ ಅಮೇರಿಕಾ ಚುನಾವಣೆಯಿಂದ ಆರಂಭವಾಗಿ ಕಲಾಸಿಪಾಳ್ಯದ ಗಲ್ಲಿಒಳಗೆ ನುಸುಳಿ, ದೂರದ ಧಾರವಾಡದ ಮಧುರ ನೆನಪನ್ನು ಮೆಲುಕುಹಾಕಿದೆವು.
ಕರ್ನಾಟಕ ವಿಶ್ವವಿದ್ಯಾಲಯ, ನಮ್ಮಿಬ್ಬರನ್ನು ಹತ್ತಿರಕ್ಕೆ ತಂದು ಒಂದು ಅಪರೂಪದ ಬಾಂಧವ್ಯ ಬೆಸೆದ ಮಣ್ಣದು. ಮೊದಮೊದಲು ಅಷ್ಟಾಗಿ ಬೆರೆಯದ ನಾವುಗಳು ಅಂತ್ಯದ ಹೊತ್ತಿಗೆ ಹಾಲು ನೀರಾಗಿದ್ವಿ. ಅಜ್ಜನಂಗಡಿಯ ಕ್ಯಾಂಟೀನ್ ಕಟ್ಟೆ ನಮ್ಮ ಪಟಾಲಾಂ ನ ವೇದಿಕೆಯಾಗಿತ್ತು. ಮೊನ್ನೆ ಕೂಡಾ ಮಾತು ಹಾಗೆ ತೇಲುತ್ತಾ ವಿವಿ ಅಂಗಳಕ್ಕೆ ಬಂದು ನಿಂತಿತ್ತು. ಆಗಿನ ದಿನಗಳೇ ಹಾಗೆ, ತಿಂಗಳ ಆರಂಭದಲ್ಲಿ ಒಂದಿಷ್ಟು ಕಾಸು ಕೈಗಿದ್ದರೆ ಸಾಕು. ಮೊದಲ ಪ್ರೋಗ್ರಂ ಚಿಕನ್ ಹಾಗೂ ಕಟಕಲ ರೊಠ್ಠಿ. ನಿಜ ಅಪರೂಪದ ಈ ಊಟ ಮತ್ತೆ ಇಬ್ಬರ ತುಟಿ ಅಂಚಿಗೆ ಬಂದು ಹೋಗಿತ್ತು. ಇಬ್ಬರ ಹಾಸ್ಟೆಲ್ ನಡುವೆ ಮೂರ್ನಾಲ್ಕು ಕಿ ಮೀ ಅಂತರ. ಆಗಿನ ಜೋಷೆ ಅಂಥದ್ದು. ಜೋಮನ ರೂಮಲ್ಲಿ ತಯಾರಾಗುತಿದ್ದ ನಳಪಾಕ ನೇರ ಶಾಲ್ಮಲೆಯ ಮಡಿಲಿಗೆ ಬಂದು ಸೇರುತಿತ್ತು. ಅದು ಬರೋಬ್ಬರಿ ಅಂಗಳದಲ್ಲಿ ಮಲಗಿದ್ದ ಹೆಣಗಳು ಎದ್ದು ತಿರುಗಾಡುವ ವೇಳೆಗೆ.
ನಡು ರಾತ್ರಿಯ ಇಂಥಹ ಅದೆಷ್ಟೋ ಚಿಕನ್ ಪಾರ್ಟಿಗಳು ಮತ್ತೆ ನಮ್ಮಬ್ಬರ ನೆನಪಿನ ಪುಟ ತಿರುಗಿಸಿತ್ತು.
ಏನೂ ಇಲ್ಲದೇ, ಕೈಗೆ ಸಿಕ್ಕ ಉಕ್ಕು ಖಾರ ಬೆರಸಿ ತಿಂದಿದ್ದ ಅದರ ರುಚಿಯೇ ಬೇರೆ. ನಿಜ ಈಗ ಎಲ್ಲವೂ ಬದಲಾಗಿದೆ. ಹತ್ತಿರವಿದ್ದವರು ದೂರಾಗಿದ್ದೇವೆ. ಆಗೊಮ್ಮೆ ಈಗೊಮ್ಮೆ ಬಂದು ಹೋಗೋ ಗೆಳೆಯ ಈ ಹೊತ್ತಿಗೆ ಸಿಹಿ ನಿದ್ರೆಗೆ ಜಾರಿರಬೇಕು. ಹಾಗೊಮ್ಮೆ ಕನಸು ಬಂದ್ರೆ, ಸ್ಪಪ್ನ ಸುಂದರಿ ಬದಲಿಗೆ ಚೀರಿ, ಹಾಗೇ, ಕೂಗಿ ನಕ್ಕ ಆ ಗಳಿಗೆ ಎದುರಾಗಲಿ.
ಸುಮ್ಮನೆ ಬಂದು ಹೋದ ಗೆಳಯನಿಂದ ಹೊಸ ಹುಮ್ಮಸ್ಸು ಮೂಡಿದೆ. ಕೂಡಿ ಕಳೆದ ಆದಿನಗಳು, ಎಂದಿಗೂ ಹಸಿರಾಗಿರಲಿ.
ಇತ್ತಕಡೆ ಒಲೆಮೇಲಿದ್ದ ಚಿಕನ್ ಬೆಂದಾಗಿದೆ. ಮತ್ತೆ ಘಮ ರೂಮಿನ ಆವರಣದಲ್ಲಿ ತೇಲುತ್ತಿದೆ. ಬನ್ನಿ ಹಾಗೇ ಒಂದು ರುಚಿ ನೋಡೋಣ.
ಹಾಗೇ ಸುಮ್ಮನೆ........
ಪ್ರತೀಕ್ ಕೊಟ್ರೇಶ್

Tuesday, October 28, 2008

ಅನುಭವದ ಅನುಭಾವ ........

ಅನುಭವ ಈ ಪರಿಕಲ್ಪನೆಯೇ ಜಟಿಲ . ಆದ್ರೆ ಯಾವುದೇ ಕೆಲಸಕ್ಕೆ ಹೋದ್ರು ಮೊದಲು ಕೇಳೋ ಪ್ರಶ್ನೆ ನಿಮಗೆ ಎಷ್ಟು ಅನುಭವ. ಕೆಲಸ ಕೊಡೋಕೆ ಇವರು ರೆಡಿ ಇರೋಲ . ಅಂದ್ರೆ ಬಹುತೇಕ ಕಂಪನಿಗಳ ಪ್ರಕಾರ ಅನುಭವ ಅನ್ನೋದು ನಿಮ್ಮ ಹೆಸರಿನ ಮುಂದೆ ಪೋಣಿಸಿಕೊಳ್ಳೋ ಸರ್ಟಿಫಿಕೇಟ್ ......... ನೋಡು ನನಗೆ madhyama ಕ್ಷೇತ್ರದಲ್ಲಿ ೨೦ ವರ್ಷ ಅನುಭವ ಇದೆ . ಹೇ ತಗೀ ನಾನು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಜೀವಮಾನ ಪೂರೈಸಿದ್ದೇನೆ . ಹೀಗೆಂದು ಬಡಾಯಿಕೊಚಿ ಕೊಳ್ಳೋ ಅನೇಕ ಸ್ವಯಮ್ ಘೋಷಿತ ಬುದ್ಧಿವಂತರನ್ನ ನಾವು ನೋಡಿದ್ದೇವೆ . ಈ ವರ್ಗದ ಪ್ರಕಾರ ವರ್ಷಗಳ ಗುಣಕಾರವೇ ಕೆಲಸದ ನೈಪುಣ್ಯತೆ ಅಳೆಯುವ ಮಾನದಂಡ . ಈ ವಾದಕ್ಕೆ ನನ್ನ ತೀವ್ರ ಆಕ್ಷೇಪವಿದೆ . ನೀವು ಸಮಾನಮನಸ್ಕರಾಗಿ ನನ್ನ ವಾದವನ್ನು ಒಪ್ಪುವಿರಿ ಎಂದುಕೊಂಡು ಈ ಪದಗಳ್ಳನು ಜೋಡಿಸುವ ಯತ್ನಕ್ಕೆ ಮುಂದಾಗಿದ್ದೇನೆ . ಆದ್ರೆ ಒಪ್ಪಿಕೊಳೋದು ನಿಮ್ಮ ಅಂತಃಕರಣಕ್ಕೆ ಬಿಟ್ಟ ವಿಷಯ .
ಅಭಿನವ್ ಬಿಂದ್ರಾ ೨೪ ನೇ ವಯಸಿನಲ್ಲೇ ಒಲಿಂಪಿಕ್ಸ್ ನಲ್ಲಿ ಭಾರತ ಮಾತೆಯ ಕೊರಳಿಗೆ ಸ್ವರ್ಣ ಧರಿಸಿದ ಹೆಮ್ಮೆಯ ಪುತ್ರ .....
ಯುನೋನ ಬುಕಾಸೋವ್ ೫ ನೇ ವಯಸಿನಲ್ಲೇ ೧೪ ಸಾವಿರ ಅಡಿ ಎತ್ತರದ ಶಿಖರ ಏರಿದ ಧೀರೆ .... ಮಾಸ್ಟರ್ ಕಿಶನ್ ಅತ್ಯಂತ ಕಿರಿಯ ಸಿನಿಮಾ ನಿರ್ದೇಶಕ ......ದರ್ಶೀಲ್ ಸಫಾರಿ ಪ್ರಥಮ ಚಿತ್ರ ತಾರೆ ಜಮೀನ್ ಪರ ಚಿತ್ರದಲ್ಲೆ ಎಲ್ಲರ ಮನಗೆದ್ದ ತುಂಟ .
ಇವರೆಲ್ಲರ ಹೆಸರುಗಳ್ಳನ್ನ ಯಾಕೆ ಹೇಳ್ತಾಇದೀನಿ ಅಂತ ಆಶ್ಚರ್ಯವಾಗಬಹುದು . ಇವರೆಲ್ಲರ ಗುರುತುಗಳು ಇಲ್ಲಿ ಪ್ರಸ್ತುತ .
ಯಾಕಂದ್ರೆ ಇವರಾರು ಅವರವರ ಕ್ಷೇತ್ರದಲ್ಲಿ ದಶಕಗಳ ಕಾಲ ಅನುಭವ ಇದ್ದವರಲ್ಲ . ಆದ್ರೆ ಅಂದುಕೊಂಡದನ್ನ ಸಾಧಿಸಿಯೇ ತಿರಬೇಕೆಂಬ ಮಹದುದ್ದೇಶ ಈವರಲ್ಲಿ ಮನೆಮಾಡಿತ್ತು . ಕೂತರು ನಿಂತರು ಗೆಲ್ಲಲೆಬೇಕಂಬ ಮಂತ್ರ ಅವರನ್ನ ಮಂತ್ರಮುಗ್ಧಗೊಳಿಸುತಿತ್ತು .ಒಂದೊಮ್ಮೆ ನಿದ್ರೆಗೆ ಜರಿದರೂ ಕನಸು ಕನವರಿಕೆ ಬಡಿದೆಬಿಸುತಿತ್ತು . ಇವರುಗಳ ಕರ್ಮಯೋಗಕ್ಕೆ ಹತ್ತು - ಇಪ್ಪತು ವರ್ಷಗಳ ಅನುಭವ ಹೆದರಿ ಓಡುತಿತ್ತು . ಗೆಲುವಿನ ಮಂತ್ರ ಪಠನಕ್ಕೆ ಕರ್ಣಾನಂದವಾಗುತಿತ್ತು . ವ್ಯಕ್ತಿ ಒಬ್ಬ ಕ್ಷೇತ್ರ ವೊಂದರಲ್ಲಿ ೧೦-೨೦ ವರ್ಷಗಳಲ್ಲಿ ಮಾಡುವ ತಪ್ಪನು ಇವರು ದಿನಗಳ ಲೆಕ್ಕದಲ್ಲಿ ಮಾಡುತಿದ್ದರು . ಆ ಮೂಲಕ ಪಾಠ ಕಲಿತಿದ್ರು.
ಅನುಭವಿಗಳನ್ನ ಮೀರಿಸುವ ಅನುಭವ ಇವರಿಗೆ ದಕ್ಕಿತು . ಗೆಲುವಿನ ಗರಿ ಮುಕುಟಕ್ಕೆ ಏರಿತು . ಅದರಿಂದ ನನ್ನ ವಾದವಿಷ್ಟೇ , ಸಾಮರ್ಥ್ಯ ವನ್ನು ಅನುಭವ ಮಾತು ವಯಸ್ಸಿನ ಆಧಾರದ ಮೇಲೆ ಅಳೆಯಬೇಡಿ . ಮೊದಲು ಅನುಭವ ಪಡೆಯಲು ಬಿಡಿ . ಜೊತೆಗೆ ಹುರಿದುಂಬಿಸಿ ........ IN YOU CANNOT ಸುಮ್ಮನಿರಿ .... ಆದ್ರೆ ಎಚ್ಚರ ..... ಪ್ರತಿಭೆಯನ್ನು ಸುಡುತೇನೆ ಎಂಬುದು ಮೂರ್ಖತನದ ಪರಮಾವಧಿ ........
ಶರತ್ .....

Sunday, October 26, 2008

ಆಕಸ್ಮಿಕವಾಗಿ ಎದುರಾದ ಮಾನವೀಯ............


ಅದು ಪ್ರತಿದಿನದ ಬದುಕು. ಎಲ್ಲಿಂದಲೋ ಬಂದವರು ನಾವುಗಳು ಒಂದು ನೆಲೆ ಅಂತಾ ನಿಂತಿದ್ದೇವೆ. ನಮ್ಮ ಮನೆ ಒಂದು ಮೂಲೆ, ಕಾರ್ಯ ನಿರ್ವಹಿಸೋದು ಇನ್ನೆಲ್ಲೋ. ಹೀಗೆ , ದಿನದ ಜಂಟಾಟದ ನಡುವೆ ಬಸ್ಸೇರಿ ಕಛೇರಿಯೆಡೆಗೆ ಮುಖ ಮಾಡಿದ್ದೆ. ನಿಜವಾಗೂ ಅವತ್ತು ರಸ್ತೆ ಖಾಲಿ ಖಾಲಿ. ನೋಡು ನೋಡುತಿದ್ದಂತೆ ಬಸ್ಸು ತನ್ನ ವೇಗ ಪಡೆದುಕೊಂಡಿತ್ತು. ಭಾನುವಾರ. ಮುಂದಿದ್ದ ದೀಪಗಳ ಹಬ್ಬಕ್ಕೆ ಒಂಥರಾ ನೀರವ ಮೌನ.

ಓಡುತಿದ್ದ ಬಸ್ಸು ಕ್ರಮೇಣ ಬುಸುಗುಡುತಿತ್ತು. ಕಣ್ಣು ಹಾಗೇ ಹದವಾದ ನಿದ್ದೆಗೆ ಜಾರುತಿತ್ತು. ಪಕ್ಕದಲ್ಲಿದಿದ್ದ ಗೆಳಯ ರಫಿ ಎಫ್ ಎಂ ನ ಹಾಡಿಗೆ ತಲೆದೂಗುತಿದ್ದ. ಒಂದರ ನಂತರ ಒಂದರಂತೆ ಎದುರಾದ ನಿಲ್ದಾಣ ದಾಟಿ ಬಸ್ಸು ತಿರುವಿನಲ್ಲಿ ಹೊರಳಿದ್ದೇ ತಡ, ಬಸ್ಸು ಧಿಡೀರನೇ ಬ್ರೇಕ್ ಹಾಕಿತು. ನಿದ್ರಾ ದೇವತೆ ಆವರಿಸಿದ್ದ ನನಗೆ ಎದುರಿದ್ದ ಚಿತ್ರಣ ಅಸ್ಪಷ್ಟವಾಗಿತ್ತು.

ನಿಜವಾಗೂ ಜೀವ ಇಷ್ಟು ಅಗ್ಗವಾ ಅನ್ನಿಸಿದ್ದು ಆವಾಗಲೇ. ಪಟಾಕಿ ತರುವುದಾಗಿ ಹೇಳಿ ಹೊರನಡೆದ ತಂದೆ. ಹಬ್ಬದೂಟಕ್ಕೆ ದಿನಸಿ ತರುವ ಭರವಸೆ ನೀಡಿದ ಗಂಡ, ಜವಾಬ್ದಾರಿಯುತ ಮಗ, ಅಷ್ಟೇ ಅಲ್ಲಾ ಅಣ್ಣ, ತಮ್ಮ ಹೀಗೆ ಎದುರಿದ್ದ ಮನುಷ್ಯನಿಗೆ ಅದೆಷ್ಟೋ ಜವಾಬ್ದಾರಿಯ ಪಾತ್ರಗಳು. ತಲೆಗೆ ತೂಗು ಹಾಕಿದ ಹೆಲ್ಮಟ್ ನೆಲಕ್ಕುರುಳಿದೆ. ಪಕ್ಕದಲ್ಲೇ ಕಡು ಗೆಂಪು ಬಣ್ಣದ ಸಿಂಚನ. ಕಾಲಿಗೆ ತೊಟ್ಟಿದ್ದ ಬಾಟಾ ಚಪ್ಪಲಿ ಮಾರು ದೂರಕ್ಕೆ ಸರಿದೆವೆ. ಕನ್ನಡಕ ತನ್ನ ಆಕಾರಕಳಿದುಕೊಂಡು ಅಂಗಾತ ಮಲಗಿದೆ.

ಎದುರಿಂದ ಬಂದ ಕಾರಿಗೆ ಆಯ ತಪ್ಪಿ ಬೈ ಸವಾರ ನೇರವಾಗಿ ಡಿಕ್ಕಿಹೊಡೆದಿದ್ದಾನೆ. ಅಷ್ಟೇ, ಪರಿಣಾಮ ರಸ್ತೆ ಡಿವೈಡರ್ ನೆತ್ತಿ ಸೀಳಿದೆ. ಇಲ್ಲೊಂದು ವಿಷಯ ಪ್ರಸ್ತಾಪಿಸಲೇಬೇಕು. ಈ ನಮ್ಮ ಬೆಂಗಳೂರಿನ ಆಟೋ ಡ್ರೈವರ್ ಗಳನ್ನ ಅದೆಷ್ಟೇ ಜನ ಬೈಕೋಬಹುದು. ಇಲ್ಲ ಕಣ್ರೀ ಅವರಿಗೂ ಮಾನವೀಯತೆ ಇದೆ. ಈ ಅಪಘಾತ ಪ್ರಕರಣದ ನಿಜವಾದ ಹೀರೋಗಳೇ ಆಟೋ ಚಾಲಕರು.

ನಿಯಂತ್ರಣ ತಪ್ಪೋ, ಮೈಮರೆತೋ ಅಥವಾ ಆಕಸ್ಮಿಕವಾಗೋ ನಡೆದ ಈ ಘಟನೆಯಲ್ಲಿ ಅದೆಲ್ಲಿದ್ರೋ, ಬಂದೋರೇ, ಪೂರ್ವಾಪರ ವಿಚಾರಿಸದೇ, ವ್ಯಕ್ತಿಯ ಬಗುಲಿಗೆ ಕೈಹಾಕಿದೋರೇ ಆಟೋ ಏರಿಸಿ ಆಸ್ಪತ್ರೆಗೆ ಹೊಡಿ. ಅಲ್ಲಿಗೆ ಒಂದು ಚಿತ್ರಣ ಅಂತ್ಯವಾಗುತ್ತೆ.

ನೋಡುತ್ತ ನಿಂತ ನಮ್ಮೆಲ್ಲರನ್ನ ಉದ್ದೇಶಿಸಿ ಆಟೋ ಚಾಲಕನೊಬ್ಬ ಒಂದೇ ಮಾತು. ನೋಡ್ತಾ ನಿಲ್ಲೋಕೆ ಇದು ಸಿನಿಮಾ ಅಲ್ಲಾ, ಸ್ವಲ್ಪ ಯಾಮಾರಿದ್ರೆ ಜೀವ ಗಡಿ ದಾಟುತ್ತೆ. ನಿಜಕ್ಕೂ ಸತ್ಯ ಕಣಯ್ಯಾ. ಯಾರಿಗೂ ರಕ್ತದ ಮಡುವು ದಾಟಿ ಆತನ ಕೈಹಿಡಿದು ನೆರವಾಗೋ ಮನಸು ಬರಲಿಲ್ಲ. ಆದ್ರೆ, ಆಟೋ ಅಂತಾ ಕರೆಯಿಸಿಕೊಳ್ಳೋ ಈ ಜನಗಳ ಸಾಮಾಜಿಕ ಕಳಕಳಿ ಹೆಮ್ಮೆತರುತಿತ್ತು.

ಬದುಕಿನ ಬಂಡಿ ಒಂದಿಷ್ಟು ಆಯ ತಪ್ಪದ್ರೆ. ಇಲ್ಲಿ ಯಾರೂ ಇಲ್ಲ ಅಂದುಕೊಂಡು ಮನೆ ಬಿಡುವ ಜನಗಳ ಪಾಲಿಗೆ ಆಟೋದವರು ಇದ್ದಾರೆ. ಒಂದಲ್ಲಾ ಎರಡಲ್ಲಾ ಹತ್ತಾರು ಆಟೋಗಳು ಜಮಾಯಿಸಿ ಆ ಅನಾಮಿಕನೊಬ್ಬನ ನೆರವಿಗೆ ಬಂದದ್ದು, ಅದ್ಭುತ.

ದಾರಿಯಲ್ಲಿ ರಕ್ತಕಾರಿ ಸಾವಿನ ಕದ ತಟ್ಟಿದ ವ್ಯಕ್ತಿ ಇದೀಗ ಅದ್ಯಾವುದೋ ಆಸ್ಪತ್ರೆಯ ಮಂಚದ ಮೇಲೆ ಹಾಗೇ ಒರಗಿರಬಹುದು. ಮನಸ್ಸಿನ ಕಂದಕದಿಂದ ಒಂದೇ ಮಾತು, ಬದುಕಿದೆನಲ್ಲಾ.....

ಇದಕ್ಕೆಲ್ಲಾ ಆಟೋ ಜನಗಳೇ ಕಾರಣ......

ಬರುತ್ತೇನೆ.....

ಮತ್ತೆ ನೆನಪಿನಂಗಳದಿಂದ

ಪ್ರತೀಕ್ ಕೊಟ್ರೇಶ್................

Wednesday, October 22, 2008

ಜೇನು ಜೇನಿನ ಹನಿಮಾತು.......

ಏಕೋ ಎಲ್ಲರೂ ಬೇಸರಗೊಂಡಿದ್ರು. ಮನಸು ಹೊಸದನ್ನು ಬಯಸುತಿತ್ತು. ಆಫೀಸಿನ ಮೊಗಸಾಲೆಯಲ್ಲಿ ಕಾಲ ಕಳೆದು ಕಳೆದು ಹಾಳಾದ್ದ್ ಏಸಿ ಉಸಿರು ಬಿಗಿಗೊಳಿಸಿ ಮೈ,ಕೈ ಎಲ್ಲವನ್ನೂ ಒಮ್ಮೆ ಮರಗಟ್ಟಿಸ್ತವೆ. ಇಂಥ ವಾತಾವರಣದಲ್ಲಿದ್ದೋ, ಅಥವಾ ನಮಗೆ ನಾವೆ ಕಡಿವಾಣ ಹಾಕಿಕೊಂಡೋ ಗೊತ್ತಿಲ್ಲ ಎಲ್ಲವೂ ಮರೆತಂತಾಗಿತ್ತು. ಇವತ್ತು ಒಮ್ಮೆಲೇ ನಮ್ಮ ಕಛೇರಿಯ ಕ್ಯಾಂಟೀನ್ ನಮ್ಮೆಲ್ಲರ ಮನದ ಮೊಗದಲ್ಲಿ ನಗುವಿನ ಗೆರೆ ಎಳೆದಿತ್ತು.
ಹಾಯಾಗ್ ಕುಳಿತು ಹರಟಿ, ಒಂದಿಷ್ಟು ಗೆಳೆಯರನ್ನು ಚೇಡಿಸಿ, ಕಿಚಾಯಿಸಿ ಎಲ್ಲರೂ ನಗುವಿನ ಕಡಲಲ್ಲಿ ಮಿಂದು ಎದ್ದೆವು. ಗುತ್ತಿದ್ದೋ ಗೊತ್ತಿಲ್ಲದೆಯೋ ಎಲ್ಲರೂ ಒಂದು ಗೊತ್ತಾದ ಪರಿಧಿಯಲ್ಲಿ ಬಂಧಿಯಾಗಿದಿವೀ ಅನ್ನಿಸ್ತಿದೆ. ಪ್ರತಿ ದಿನ ಸುದ್ದಿ ಒಡಲಲ್ಲಿ ಜೀವಿಸಿ ನಮ್ಮ ವಯುಕ್ತಿಕ ಬದುಕಿನ ಒಂದಿಷ್ಟು ಚಹರೆಯೇ ಬದಲಾಗಿಬಿಟ್ಟಿದೆ.
ಅದು ಕಾಲೇಜು ದಿನಗಳು, ಇಳಿ ವಯಸ್ಸಿನ ಮುದುಕನೊಬ್ಬ ನಸುಕಿಗೆ ಎದ್ದು, ಹೊಟ್ಟೆ ತುಂಬಿಸಲು ಛಲ ತೊಟ್ಟವರಂತೆ ಓಡಿ ಬರ್ತಿದ್ದ. ನಮ್ಮಜ್ಜನ ಕಾಲದ ಸೈಕಲ್ ಏರಿ, ಅದರ ಪೆಡಲ್ ಮೇಲೆ ತನ್ನ ಜೀವ ಕಳೆದು ಕೊಂಡ ಕಾಲು ಹಾಕುತ್ತ ನಮಗಾಗಿ ಬರ್ತಿದ್ದ. ತುಂಬು ೭೦ ಜೀವವದು. ಮಕ್ಕಳು ಮೊಮ್ಮಕ್ಕಳು ಹೀಗೆ ಕಾಲದೂಡೋ ಕಾಲಘಟ್ಟದಲ್ಲಿ ಎಲ್ಲಿಂದಲೋ ಬಂದು ನಾಲ್ಕಕ್ಷರ ಕಲಿವ ನಮ್ಮಂಥವರ ಹಸಿವ ನೀಗಿಸುತಿದ್ದ.
ನಿಜ. ಕಣ್ಣಲ್ಲಿ ಕಣ್ಣಿಟ್ಟು ಆತನನ್ನು ಒಮ್ಮೆ ನೋಡಿದ್ರೆ, ಜೀವ ಮರುಗುತಿತ್ತು. ನಾವೆಲ್ಲಾ ಅಸಾಯಕರು. ಮನೆಯಿಂದ ತಿಂಗಳಂತ್ಯಕ್ಕೆ ಬರುತಿದ್ದ ಚೂರು ಪಾರು ಕಾಸನ್ನೇ ಗುಡ್ಡೆ ಹಾಕಿ ದಿನ ದೂಡುತಿದ್ದೋರು ನಾವು. ನೆರವಿನ ಹಸ್ತ ನೀಡಬೇಕೆಂದ್ರೂ ಅಲ್ಲಿ ಅದು ಅಸಾಧ್ಯವಾಗಿತ್ತು.
ಇದೀಗ, ಅನ್ನದಾತನ ಮುಖದಲ್ಲಿ ಸುಕ್ಕುಗಟ್ಟಿದ ಗೆರೆಗಳು ಕಣ್ಣಿಗೆ ರಾರಾಜಿಸುತ್ತಿವೆ. ದುಡ್ಡಿಗೇ ಮಾಡಿದ್ರೂ ಅದರಲ್ಲಿ ಗೊತ್ತಿಲ್ಲದಂಥ ಒಂದು ಅವ್ಯಕ್ತ ಪ್ರೀತಿ ಇತ್ತು. ಅದ್ಭುತ ಅಲ್ಲದಿದ್ರೂ ತಿಂದ ಅನ್ನ ದೇವರಾಣೆ ಹೊಟ್ಟೆಗೆ ಹತ್ತುತಿತ್ತು. ಅಜ್ಜನ ಕ್ಯಾಂಟೀನಿನ ಹೊರಾಂಗಣದಲ್ಲಿ ಹರಟುತ್ತಿದ್ದ ನಮಗೆ ಗಡಿಯಾರ ಯಾಕಾದ್ರೂ ಇದೆ ಅನ್ನಿಸ್ತಿತ್ತು.
ಅದೊಂದು ಅಪರೂಪದ ಪ್ರಪಂಚ. ಗೆಳೆಯರ ಬಳಗ ಕಟ್ಟಿ ದಾಳಿಗಿಳಿದ್ರೆ, ಅಜ್ಜನಂಗಡಿಯ ಗಿರುಮಿಟ್ಟು ಧ್ವಂಸವಾಗ್ತಿತ್ತು. ಕ್ಯಾಂಪಸ್ ಒಣ ರಾಜಕೀಯದಿಂದ ಹಿಡಿದು, ವಿವಿಯ ಕುಲಪತಿವರೆಗಿನ ನಮ್ಮ ಮಾತುಗಳು ಇಂದಿಗೂ ಮಧುರ ಸುಮಧುರ.
ಇದೀಗ ಬೆಂದಕಾಳೂರಿನ ಹೆಬ್ಬಾಗಿಲಲ್ಲಿ ನಿಂತು ದಿನಗಳನ್ನು ಒಮ್ಮೆ ಹಾಗೇ ಮೆಲುಕು ಹಾಕಿದ್ರೆ. ಇಲ್ಲಿ ನಮ್ಮ ತನಕ್ಕೆ ಬೆಲೆ ಇಲ್ಲ.ಪಕ್ಕದಲ್ಲೇ ಹಾದು ಹೋದ್ರೂ ನಮ್ಮವರ ಬೆವರ ಕಮಟಿಲ್ಲ. ಇಲ್ಲೆಲ್ಲಾ ಸುಗಂಧ ಹೀರೋರೆ.
ನಿಜವೋ ಸುಳ್ಳೋ, ಇಂದಿನ ಕ್ಯಾಂಟೀನ್ ಪುರಾಣ ನಮ್ಮ ದಿನಗಳನ್ನು ನೆನಪಿಸಿ ಒಂದೊಮ್ಮೆ ಕಣ್ಣಂಚಲ್ಲಿ ನೀರಜಿನಿಗಿಸಿದ್ರೆ ಅದು ತಪ್ಪಲ್ಲ. ನಾವು ನಮ್ಮ ಕಾಲೇಜು ಅದೆಂಥ ಸವಿನೆನಪು.
ಇಂತಿ ನಿಮ್ಮ ಪ್ರೀತಿಯ
ಹಾಗೇ ಸುಮ್ಮನೆ.....
ಪ್ರತೀಕ್ ಕೊಟ್ರೇಶ್...........

Friday, October 17, 2008

HEART BEAT DOES TWO THINGS IT GIVES LIFE AND ASKS US TO
COUNT THE DURATION OF DEATH- SHASAN......







Wednesday, October 15, 2008

ಕ್ಷಮಿಸೆಯಾ....?


ನಿಜ ಗೆಳತಿ....

ನನ್ನಿಂದ ತಪ್ಪಾಗಿದೆ

ನಾನು ಹಾಗೆ ನಡೆದುಕೊಳ್ಳಬಾರದಿತ್ತು

ಏನು ಮಾಡ್ಲಿ ನಿನ್ನ ಬಗ್ಗೆ ನಾನು ಅಷ್ಟೊಂದು ಪೊಸೆಸಿವ್ ಆಗಿದ್ದೇನೆ

ನಿನ್ನ ನಗುವನ್ನ, ಕಣ್ಣಿನ ನೋಟವನ್ನ ಅರ್ಥ ಮಾಡಿಕೊಳ್ಳುವಲ್ಲಿ ನಾನು ಎಡವಿದೆ...

ಪೊಸೆಸಿವ್ ಆದವನಿಂದ ಇದಲ್ಲದೇ ಬೇರೆ ಏನು ತಾನೆ ನಿರೀಕ್ಷಿಸಲು ಸಾಧ್ಯ...

ಅಲ್ವ ಅಮ್ಮು...?

ಅದಕ್ಕೆ ಕೇಳ್ತಿರೋದು
ಪ್ಲೀಸ್ ಕ್ಷಮಿಸೆಯಾ....?


ಬಿಟ್ಟುಬಿಡು


ಅದೆಷ್ಟು ಮತ್ಸರ ನಿನಗೆ....?!
ಬಾಚಿ ತಬ್ಬಲಿ ಬಿಡು
ಒಂದನೊಂದನು
ಬಿಟ್ಟುಬಿಡು ಹಿಡಿದಿರುವ
ಕಣ್ಣ ರೆಪ್ಪೆಗಳನು
- ಕರಣಂ